Friday, January 25, 2013

ಸದಾ ಒಡಗೂಡಿ ಆಡಿ, ಹಾಡಿ, ಹಾಸಿ - ಹೊದ್ದ ಕ್ಷಣಗಳಿನ್ನೂ ಹಸಿರಾಗಿರುವಾಗಲೇ ಹಸೆಮಣೆಗೆ ಅಣಿಯಾಗುತ್ತಿರುವ ಅಂಗನೆಗೆ...

ಅಂದು ನನ್ನ ಹುಟ್ಟು ಹಬ್ಬ..  ಶುಭಾಶಯ,ಉಡುಗೊರೆ-ಹೀಗೆ ಸಂಭ್ರಮದಲಿ ಮುಳುಗಿ ಹೋಗಿದ್ದೆ ನಾನು. ಮೊಬೈಲ್ 'ಬೆಳದಿಂಗಳಂತೆ ಮಿನುಗಿತು'('ಬೆಳದಿಂಗಳಂತೆ ಮಿನುಮಿನುಗುತ' ಅದರ ರಿಂಗ್ ಟೋನ್ :P ) ಸಣ್ಣಗೆ ಗುಡುಗಿತ್ತು ಸಹ[vibration;)]!    ಹಲೋ ಎಂದಾಕ್ಷಣ ಕೇಳಿ ಬಂದದ್ದು 'ನಾನು ಸಹನಾ ಕಣೆ , ಹುಟ್ಟು ಹಬ್ಬದ ಶುಭಾಶಯ' (ಎಷ್ಟು ಸಾರಿ  ಕೇಳಿದರೂ ಬೇಜಾರಾಗದ ಸಾಲು ), ನಂತರ ಆಕೆ  ಹೇಳಿದ್ದು 'ನನ್ನ ಮದುವೆ  ಕಣೆ ಬರಲೇ ಬೇಕು'( ಎಷ್ಟು ಸಾರಿ ಕೇಳಿದರೂ  ನಂಬಲಾಗದ ಸಾಲು).
ಜೀವನ ಎಂದರೆ  ಬರಿ ಇಷ್ಟೇ ಅಲ್ಲ, 'ಮದುವೆ'  ಅಂತನೂ  ಒಂದಿದೆ  ಅಂತ  ನೆನಪಿಸಿದಳು ಈ ಹುಡುಗಿ!  ಹುಟ್ಟು  ಹಬ್ಬಕ್ಕೆ ಆತ್ಮೀಯರು ಬಾಹ್ಯ ಸೌಂದರ್ಯಕ್ಕೆಂದು ಏನೆಲ್ಲಾ ಉಡುಗೊರೆಯಾಗಿ ಕೊಟ್ಟರು, ಆದರೆ 'ಮದುವೆ' ಎಂಬುದಕ್ಕೆ ಮನಸ ಅಣಿಗೊಳಿಸಿಕೊಳಬೇಕೆಂದು ಈಕೆ ಕೊಟ್ಟ  ಮೌನ ಸಂದೇಶದ ಉಡುಗೊರೆ ಬಲು ವಿಶೇಷ :-)  ತಕ್ಷಣವೇ ಚಿತ್ತಕಿಳಿದ  ನೆನಪುಗಳ ಸಂತೆಯಿಂದ ಹೆಕ್ಕಿದಾಗ ಪದಗಳ ಬೊಗಸೆಯಲಿ ಸಿಕ್ಕ ಸಾಲುಗಳು ಇವಿಷ್ಟು:
              ಸದಾ  ಒಡಗೂಡಿ ಆಡಿ, ಹಾಡಿ, ಹಾಸಿ - ಹೊದ್ದ ಕ್ಷಣಗಳಿನ್ನೂ ಹಸಿರಾಗಿರುವಾಗಲೇ ಹಸೆಮಣೆಗೆ  ಅಣಿಯಾಗುತ್ತಿರುವ ಅಂಗನೆಗೆ...
 ದಿನಗಳು ಎಷ್ಟು ಬೇಗ  ಉರುಳಿದವು ಅಲ್ವಾ ! ಮೊನ್ನೆ ಮೊನ್ನೆ ಶಾಲೆಗೆ  ಹೋದ ನೆನಪು.. ಸರ್  ಬರೋವರೆಗೆ  ಚಳಿ ಕಾಯಿಸ್ತಿದ್ದಿದ್ದ ನೆನಪಿನ್ನೂ ಮಾಸಿಲ್ಲ! ಅವತ್ತು ಒಂದು ದಿನ ಸೂರ್ಯ ಎಂದಿಗಿಂತ ಚೂರು ಬೇರೆ ಕಾಣಿಸಿದ್ದಕ್ಕೆ ನಾವು ಮಾಡಿದ ಹೊಸ ಗ್ರಹದ ಅನ್ವೇಷಣೆಯಂತೂ  ಅವಿಸ್ಮರಣೀಯ. ಇನ್ನು ಚಿಕ್ಕೂ ಮರದಡಿ ಓದಲು ಕೂತು ಹರಟಿದ ದಿನಗಳು ಅವೆಷ್ಟೋ ! ವಾಲಿಬಾಲ್ cluster ಅಲ್ಲಿ ರೆಫ್ರೀ ನ ಬುಟ್ಟಿಗೆ ಹಾಕಿಕೊಂಡು ಎಲ್ಲರನ್ನೂ select ಮಾಡುವಂತೆ ಮಾಡಿದ ಮೋಡಿ ನೆನಪಿನ ಬುಟ್ಟಿಯಲ್ಲಿ ಇನ್ನೂ ಹಾಗೇ ಇದೆ.
              ಪ್ರೀತಿ, ಪ್ರೇಮ ಎನುತಿದ್ದವರ ಪರಿಹಾಸ್ಯ ಮಾಡುತಿದ್ದವರು ನಾವು. ಆದರೆ  ಈಗ ಅದೇ ನೀನು ಪತಿ, ಪೂಜೆ , ಪ್ರಾರ್ಥನೆ , ಪ್ರವಚನ  ಅಂತೆಲ್ಲಾ ಹೇಳುವ ಪ್ರಬುದ್ಧೆ . ಸ್ವಲ್ಪ ಹುಸಿಮುನಿಸು, ಸಾಗರದಷ್ಟು ಸಮಾಧಾನ, ಸಣ್ಣ ಹಠದ 'ಸನ್ನಿ' ಈಗ 'ಚಿರಂಜೀವಿ ಕುಮಾರಿ ಸೌಭಾಗ್ಯವತಿ'!!
ಮನದ ಲಜ್ಜೆ, ಅಳುಕು, ಖುಷಿಯ ಮಿಶ್ರಭಾವ ಬಿಂಬಿಸುವ ಮದರಂಗಿಯ ಚಿತ್ತಾರ, ಕುತೂಹಲ ಬೆರೆತ ಸಂಭ್ರಮದ ಗಟ್ಟಿಮೇಳ, ಜವಾಬ್ದಾರಿಯ ದಿವ್ಯಸಂಕೇತವಾಗಿ ಕರಿಮಣಿ-ಕಾಲುಂಗುರ, ಹಿರಿಯರ ಆಶೀರ್ವಾದದ ಮಂಗಲಾಷ್ಟಕದ ಮಂತ್ರಾಕ್ಷತೆ , ಪ್ರತಿ ಹೆಜ್ಜೆಗೂ ಜೊತೆ ಸಿಕ್ಕ ಸಂತಸವ ಸಾರುವ ಸಪ್ತಪದಿ- ಎಲ್ಲದರ ನಡುವೆ ಆರಂಭವಾಗಲಿರುವ ವೈವಾಹಿಕ ಜೀವನದ ದಿಬ್ಬಣ ಸದಾ ಸಿರಿಯಾಡುತ ಸಾಗುತಿರಲಿ ಗೆಳತಿ :-)

                                                                                                            -ಇಂತಿ
                                                                                                                  ಸಿರಿ 

Sunday, August 12, 2012



ಮನದಲಿರಲಿ ವೇಣುಗಾನದ ಮೃದುವಾಸ,
ಮುಖದಲಿರಲಿ ಎಂದೆಂದಿಗೂ ಮಸುಕಾಗದ ಮಂದಹಾಸ:-)

ಸದಾ ಸಿರಿಯಾಡುತಿರಲಿ ಈ ನಿನ್ನ ಅಭೇದ್ಯ ಚತುರತೆ,
ಪ್ರತಿ ಹೆಜ್ಜೆ ಪ್ರತಿಧ್ವನಿಸಲಿ ಪ್ರತಿಭೆಯ ಯಶೋಗಾಥೆ!

ನೀನೇ ನಿನ್ನ ಭವಿಷ್ಯದ ರೂವಾರಿ!
ಜೀವನ ಚುಕ್ಕಾಣಿ ಬಲು ಸೂಕ್ಷ್ಮ, ಹುಷಾರೇ ಓ ಮರಿ:-)

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ ಮಂಗಳ:-):-)
ಶುಭಮಸ್ತು:-)  

Thursday, July 5, 2012

ನೆನಪುಗಳು..... 
ಅಪ್ಪನ ತೆನಾಲಿ ರಾಮನ ಕತೆಗಳ ನೆನಪಿಸೋ ನಿದ್ದೆ ಬರದ ರಾತ್ರಿ!! 
ಸುಡುತಿದ್ದರೂ ಸರಾಗವಾಗಿ ಕಲಸಿ ತುತ್ತಿಡುತಿದ್ದ ಅಮ್ಮನ ಕೈಗಳ ನೆನಪಿಸೋ
ಬಿಸಿ ಅನ್ನ ಸಾರು!!
ಮನಸ್ವೇಚ್ಚೆ ಆಡಿ ಬಿಳಿ ಅಂಗಿ ಕೊಳೆ ಮಾಡಿಕೊಂಡು  ಮನೆಗೆ ಬರುತ್ತಿದುದನ್ನು  
ನೆನಪಿಸೋ ಶನಿವಾರದ ಮಧ್ಯಾಹ್ನ!!
ಆಟ,ಊಟ,ಪಾಠ ಎಲ್ಲಕ್ಕೂ ಸಾಥ್ ನೀಡುತಿದ್ದ ಕುಚಿಕೂ ಸ್ನೇಹವ
ನೆನಪಿಸೋ ಈಗಿನ ಏಕಾಂತ!!
ಅಮೃತದಂತಹ ಅಜ್ಜಿ ಅಡುಗೆಯ ನೆನಪಿಸೋ ಹೆಂಚಿನಡಿಯ ಬಾಳೆ ಎಲೆ ಊಟ!!
ನೆನಪುಗಳು ನೆನಪಾಗಿ ಮುಸುನಗಲು ತುಸು ನೆಪ ಸಾಕಲ್ಲವೇ 
ಈ ಹುಸಿಮರೆವಿನ ಮನಸಿಗೆ?!! 
                                                 -ಸಿರಿ   

Monday, March 26, 2012

ಭ್ರಾತೃಶ್ರೀ ಭರತ್ ಗೆ birthday ಯ badaayi..


    ಹೇ ಪುಟ ಎಷ್ಟು ಬೇಗ ಇಷ್ಟು ದೊಡ್ಡವನಾಗಿಬಿಟ್ಟೆ!! ಬಹು ಬಣ್ಣ ಮಿಶ್ರಿತ ಭಾವಗಳಿಂದ ಕೂಡಿ ವಿಜ್ರಂಭಿಸುತಿತ್ತು ಈ ಜಗತ್ತಿಗೆ ನೀನು ಪಾದಾರ್ಪಣೆ ಮಾಡಿದ್ದ ಆ ದಿನ - ಹೌದು ಆ ದಿನ ಹೋಳಿ! ಆಗ ಆ ೩ ವರ್ಷ ವಯಸ್ಸಿನ ನನ್ನ ಕಣ್ಣುಗಳು ಗ್ರಹಿಸಿದ್ದು ಎರಡೇ ಬಣ್ಣ. ಒಂದು ಹೋಳಿಯ ಸಂಭ್ರಮದ್ದು ಮತ್ತೊಂದು ನನ್ನ ಜೊತೆ ಆಡುವುದಕ್ಕೆ, ತಮ್ಮ ಎಂದು ಕರೆಯುವುದಕ್ಕೆ, ಅಕ್ಕ ಎಂದು ಕರೆಸಿಕೊಳ್ಳುವುದಕ್ಕೆ ಒಬ್ಬ ಮುದ್ದಿನ ತಮ್ಮ ಸಿಕ್ಕ ಎಂಬ ಖುಷಿದು. ಹಾಗೆ ಅದನ್ನೆಲ್ಲ ಈ ೨೦ ವರ್ಷ ವಯಸ್ಸಿನ ಕಣ್ಣಿನಿಂದ ಅಪ್ಪ,ಅಮ್ಮ,ಅಜ್ಜಿ,ತಾತ ರ ಮನದಲ್ಲಿ ಇಣುಕಿದಾಗ ಕಾಣಸಿಕ್ಕಿದ್ದು ಮಗದೊಂದು ಬಣ್ಣ - ವಂಶೋದ್ಧಾರಕ ಉದಯಿಸಿದನೆಂಬ ಸಾರ್ಥಕತೆಯ ಸಿರಿ.
            ನಂತರ ನೀನು ಮಾತಾಡೋದು ಕಲಿತೆ. ಮಾತು ಬಂದಿದ್ದೇ ತಡ ದೇವರಲ್ಲಿ ನಿನ್ನ ಪ್ರಥಮ ಕೋರಿಕೆ - ದೇವ್ರೇ ಬೇಗ ಮೀಸೆ ಬರೋ ಹಾಗೆ ಮಾಡಪ್ಪ ಅಂತ. ಗುಡಿಗೆ ಹೋದ್ರೆ ನಮಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗು. ನಂತರ ನಿನ್ನ ಶಾಲೆಗೆ ಸೇರಿಸಬೇಕದ್ರಂತೂ ನಾನು ಶತಪ್ರಯತ್ನ ಮಾಡಬೇಕಾಯ್ತು. ಅದೆಷ್ಟು ಹಠ ಪುಟ ನಿಂದು. ಆದರೆ ಅಲ್ಲಿಂದ ನೀ ಹಿಡಿದ ಹಾದಿಗಳೆಲ್ಲವೂ ಯಶಸ್ಸಿನವೇ.
ಹೀಗೆಯೇ ನಿನ್ನ ಜೀವನದಲ್ಲಿ ಪ್ರತಿ ಘಳಿಗೆ, ಪ್ರತಿ ಕ್ಷಣವೂ ಯಶಸ್ಸು ದೊರೆಯುತಿರಲಿ. ಜೀವನವೆಂಬ ದೋಣಿಯ ಚುಕ್ಕಾಣಿ ಯಾವ ತರಹದ ನೇವುರಕ್ಕೂ ಸಿಗದಂತೆ ಅದನ್ನು ಅತೀ ಜಾಗರೂಕತೆಯಿಂದ ನಡೆಸುವಂತಾಗಲಿ.ಧಮನಿ-ಧಮನಿಗಳ ಮಿಡಿತಗಳಲ್ಲಿ ಕೇಳಿ ಬರಲಿ ಪರಿಶ್ರಮ,ಹೋರಾಟ,ವಿವೇಕ,ಸಭ್ಯತೆ,ಸಜ್ಜನಿಕೆಯ ಸಾಮಗಾನ. ನೀನು ಮಾಡಿದ ಉಪಕಾರ, ಆಡಿದ ಒಳ್ಳೆಯ ಮಾತೇ ನಿನ್ನ ಭವಿಷ್ಯಕ್ಕೆ ಇಂಬು.ಈ ನಿನ್ನ ೧೭ನೆಯ ಸಂವತ್ಸರದ ಹುಟ್ಟು ಹಬ್ಬ ಉಜ್ವಲ ಹಾಗೂ ಶಾಂತಿ ತುಂಬಿದ ಖುಷಿ ಜೀವನಕ್ಕೆ ನಾಂದಿಯಾಗಲೆಂದು ಆಶಿಸುತ್ತಾ
                                                                                                                                                                                          -ನಿನ್ನ ಅಕ್ಕ
    ಮತ್ತೊಮ್ಮೆ ಹುಟ್ಟು ಹಬ್ಬದ  ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
      ಶುಭವಾಗಲಿ:) 

Tuesday, January 31, 2012

SHEರಸಿಯಲ್ಲಿ SHEಯ ಮನೆ

ಅಂದು ಆದಿತ್ಯವಾರ. ಅಮ್ಮ ಕೇಳಿದ್ರು ತಿಂಡಿ ಏನ್ ಬೇಕಂತ. ಮನೇಲಿ ಏನೇನ್ ತಿನ್ಬೇಕು ಅಂದುಕೊಂಡಿದ್ನೋ ಎಲ್ಲ ತಿಂದಾಗಿತ್ತು. ಆಗ ನೆನಪಾಗಿದ್ದು ತೆಳವು ಬೆಲ್ಲ. ಹಾಗಂದಾಗ ನೆನಪಗೋದೆ ಶಿರಸಿ. ಹೀಗೆ ನಮ್ಮ ಪಯಣ ಶುರು ಆಯಿತು. ಹೋಗೋ ಮುಂಚೆ ಹೇಳೋಣ ಅಂತ  ಗೆಳತಿ ಉಷಾಳ ಮೊಬೈಲ ಗೆ  ಕರೆ ಮಾಡಿದ್ರೆ ತಾಗಲಿಲ್ಲ. ಈ ಮೊಬೈಲ್ ಗಳೇ ಹೀಗೆ ನೋಡಿ boyfriend ತರಹ. ಯಾವಾಗ ವ್ಯಾಪ್ತಿ ಪ್ರದೇಶದಿಂದ ಹೊರಗೋಗ್ತಾರೆ ಹೇಳಲಿಕ್ಕಾಗಲ್ಲ. ಅದೇ landline ಹಾಗಲ್ಲ. ಅದು ಪತಿ ತರ. 'ಏನೋ ಕೆಲವೊಮ್ಮೆ ಬೇರೆಯವರೊಡನೆ ವ್ಯಸ್ತರಾಗಿದ್ದಾರೆ' ಅಂತ ಬರಬಹುದು ಆದ್ರೆ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗೋದು ಅತೀ ವಿರಳ. ಆದ್ದರಿಂದ landline ಗೆ ಕರೆ ಮಾಡಿ ತಿಳಿಸಿ ಮನೆ ವಿಳಾಸ ಕೇಳಿದ್ದು ಆಯಿತು. ಇಷ್ಟರಲ್ಲಿ ಶಿರಸಿ ಬಂತು. ಕುಳಿಮನೆ ದಾರಿ ಹಿಡಿದೆವು. ಅಲ್ಲಿ ಜನರು ಕುಳಿಮನೆಗೆ ಸೀದಾ ಹೋಗ್ಬೇಕು ಅಂತ ಹೇಳಿದ್ರು. ಹಾಗೆ ನಾವು ಹೊರಟೆವು. ಮೊದ ಮೊದಲು  ಒಂದೆರಡು ಹಳ್ಳಿ ಸಿಕ್ಕಂಗಾಯ್ತು. ಆಮೇಲಂತೂ ಎಲ್ಲೆಡೆ ಕಾಡು ಕಾಡೇ. ಅರ್ಧ ತಾಸಾದ್ರು  ಒಂದು ಮನೆಯಾಗಲೀ  ಮನುಷ್ಯರಾಗಲೀ  ಏನೂ ಕಣ್ಣಿಗೆ ಬೀಳಲಿಲ್ಲ. ನಮಗೆ ಗಡ ಗಡ ಶುರು ಆಯಿತು. ಮುಂದೆ ದಾರೀ ಆದರೂ ಇದೆಯೋ ಇಲ್ವೋ ಅಂತ ಸಹ ಗೊತ್ತಾಗ್ತಿಲ್ಲ. ಸಾಲದಂತೆ  ಕಾರ್ ಅಲ್ಲಿ ಪೆಟ್ರೋಲ್ ಬೇರೆ ಖಾಲಿ ಆಗ್ತಾ ಬಂದಿತ್ತು. ಅಂದ್ರೂ  ದೇವರ ಮೇಲೆ ಭಾರ ಹಾಕಿ ಹೊರಟೆವು. ಇದರ ಜೊತೆ  ಮಳೆ ಬೇರೆ. ಕಾರ್ ಅಲ್ಲಿ ಸಣ್ಣಗೆ ಹಾಡು ಕೇಳಿ ಬರ್ತಿತ್ತು. 'ಉಡಿಸಲೇ ಬೆಳಕಿನ ಸೀರೆಯ ' ಹಾಡು ಮುಗಿದು female version ಶುರು ಆಯಿತು. ಅದಕ್ಕೆ ನಮ್ಮ ಭ್ರಾತೃಶ್ರೀ ಅವ್ರು ಹೇಳಿದ್ದು "ಇಲ್ಲಿ ತನಕ ಅವ ಸೀರಿ ಉಡಿಸಿದ  ಇನ್ಮ್ಯಾಲ ಇಕಿ ಅಂಗಿ ಹಾಕ್ತಾಳನ". ಭಯ ಆವರಿಸಿದ್ದ ಆ ಸಮಯದಲ್ಲಿ ನಗು ಕೂಡ ಭಯದಿಂದ ಹಾಡು ಹೋದಂಗಿತ್ತು. ಹೀಗೆ ಹೋಗ್ತಾ ಕೊನೆಗೂ ದೇವರ ಹಾಗೆ ಒಬ್ರು ಅಜ್ಜ ಕಂಡರು. ಅವ್ರು ಸಹ ಹೀಗೆ ಸೀದಾ ಹೋಗ್ಬೇಕು ಅಂದಾಗ ಹೋದ ಜೀವ ಬಂದಂಗಾಯ್ತು. ಅಂತು ಒಂದು ಮನೆ ಕಾಣಿಸಿ  ಬಿಡ್ತು. ಜೋರಾಗಿ horn ಹಾಕ್ತಾ ಮನೆ ಕಡೆ ತಿರ್ಗಿದ್ವಿ. ಅದು ಆ ಸಂದರ್ಭಕ್ಕೆ ವಿಜಯದ ಕಹಳಯಂತಿತ್ತು. ನಂತರ ಮನೆ ಕಡೆ ನಡೆದೆವು. ಕ್ಷೇಮ ವಿಚಾರಿಸಿದ್ದಾಯ್ತು. 'ಆಸರೆಗೆ ಎಂತ ತಗೋತೀರಿ" ಅಂತ ಕೇಳಿದ್ದಾಯ್ತು. ಎಷ್ಟೊತ್ತಾದರೂ ಉಷಾ ಹೊರಗೆ  ಬರಲಿಲ್ಲ. "ಅಂಕಲ್, ಉಷಾ ಎಲ್ಲಿ?" ಅಂತ ಕೇಳಿದಾಗ ಅವರು "ಉಷಾನ, ಆ ತರ ಇಲ್ಲಿ ಯಾರು ಇಲ್ಲ" ಅಂದಾಗ ನಾನು "neevu ಈಶ್ವರ ಹೆಗಡೆ ಅಲ್ವ? " ಅಂದಾಗ "ಹೌದು, ಆದರೆ ಈಶ್ವರ ಹೆಗಡೆ ಅಂತ ಇಲ್ಲಿ ಇನ್ನೊಬ್ಬರಿದ್ದಾರೆ, ಅವರ ಮಗಳು ಉಷಾ" ಅಂದ್ರು. ಆಗ  ನಮಗೆ ತಿಳೀತು  ಇದು ಅವಳ ಮನೆ ಅಲ್ಲ ಅಂತ. ಇಷ್ಟು ಗೊತ್ತಾದ ಮೇಲೂ ಕೂಡ ಅವರು ಹೇಗೂ  ಬಂದಿದೀರಿ  ಇವತ್ತೊಂದಿನ  ಇದ್ದು  ಹೋಗಬಹುದಲ್ಲ" ಅಂದರು. ಮತ್ತೆ  ಬರ್ತೀವಿ  ಅಂತ ಹೇಳಿ ನಾವು  ಅವಳ ಮನೆಯ ವಿಳಾಸ ಕೇಳಿಕೊಂಡು ನಡೆದೆವು. ಕೊನೆಗೂ ಆಕೆಯ  ಮನೆ ಸಿಕ್ಕಿ, ಅಲ್ಲಿ ಆಗಿದ್ದೆಲ್ಲ  ಹೇಳಿ ತೆಳವು ಬೆಲ್ಲ ತಿಂದೆವು. ಹಾಗೆ ಬೆಟ್ಟಕ್ಕೆ ಹೋಗಿ  ಬರುವಷ್ಟರಲ್ಲಿ ಅಪ್ಪ  ಅಮ್ಮ  ಅಡಿಗೆಮನೆಗಂತೂ  ಬರೋದೇ ಇಲ್ಲ, ನಿದ್ದೆ ತುಂಬಾ.. ಹೀಗೆ ಅನಂತಾನಂತ ಅಸಮಾಧಾನಗಳನ್ನು ಪರಸ್ಪರ ಹಂಚಿಕೊಂಡಾಗಿತ್ತು. ಇಷ್ಟರಲ್ಲಿ  ಸಂಜೆ ಆಯಿತು. ಹೀಗೆ ಅಲ್ಲಿಂದ ಬರಬೇಕಾದರೆ  ಮಿಡಿಗಾಯಿ. ಜೋನಿಬೆಲ್ಲ ಹೀಗೆ ತುಂಬಾ ಏನೇನೋ ತಗೊಂಡು ಬಂದ್ವಿ. ಇವೆಲ್ಲ ದಿನ ಕಳೆದಂತೆ ಖಾಲಿ ಆದವು. ಆದರೆ 'ಅತಿಥಿ ದೇವೋಭವ' ಎಂಬ ಉಕ್ತಿಯ ಅರ್ಥವನ್ನು ಶಬ್ದಶಃ ತಿಳಿಸಿಕೊಟ್ಟ ಅ ವ್ಯಕ್ತಿಯ ಸದ್ಗುಣದ ನೆನಪು ಮಾತ್ರ ಮನದಲಿ ಮಾಸದೆ ಅಚ್ಚಾಗಿ ಉಳಿದಿದೆ. ಯಾರಾದರು ಬಾಗಿಲು ತಟ್ಟಿದಾಗ pinhole ಅಲ್ಲಿ ನೋಡಿ ನಂತರ ಬಾಗಿಲು ತೆಗೆಯೋ ಈ ಕಾಲದಲ್ಲಿ ಯಾರು ಎಂದು ಗೊತ್ತಿಲ್ಲದಿದ್ದರೂ ಒಂದು ದಿನ ಉಳಿದು ಹೋಗಬಹುದಿತ್ತು ಎಂದಾಗ ನನ್ನ ಮನಸ್ಸು ಅರಿವಿಲ್ಲದೆ ಸಲಾಂ ಹಾಕಿತ್ತು ಅವರ ದೊಡ್ದತನಕ್ಕೆ. ಆಗಿನಿಂದ ಶಿರಸಿ ಅಂದಾಗ ತೆಳವು,ಬೆಲ್ಲಕ್ಕೂ ಮುಂಚೆ ನೆನಪಾಗೋದು ಅದಕ್ಕಿಂತಲೂ ಸಿಹಿಯಾದ ವಿಶಾಲ ಹೃದಯತೆ, ಮುಗ್ದತೆ ಹಾಗೂ ಸದ್ಗುಣ. 

Monday, January 23, 2012

ಪರೀಕ್ಷೆ

ಈ ಲೇಖನ ಪರೀಕ್ಷೆಗೆ ಬಿಟ್ಟ ಗಡ್ಡ, eye-brow ಗೆ, "movie ಗಾ.. ಆಗಲ್ಲ ಮಚಾ ನಾಳೆ exam","ಇಲ್ಲ ಅತ್ತೆ ಈ ಸಂಕ್ರಾಂತಿಗೆ ಬರಕಾಗಲ್ಲ", "ಹೇ exam ಮುಗ್ದಿದ್ದಿನ ಎಲ್ಲಿಗೆ ಹೋಗಣರೆ" ಹಾಗೂ ಉತ್ತರಿಸದಿರದ "ಹಾಯ್, ಸಾಕ್ ಮಾರೈತಿ ಓದಿದ್ದು.. ಅರ್ಧ ತಾಸೂ ನಂಜೊತೆ ಚಾಟ್ ಮಾಡಕಾಗಲ್ವ!" ಅನ್ನೋ ಅನಂತಾನಂತ ಸಂದೇಶಗಳಿಗೆ..
ಅಬ್ಬ ಅಂತೂ ಇಂತೂ ಪರೀಕ್ಷೆ ಮುಗೀತು.. ಗಟ್ಟಿಯಾಗಿ ಕಟ್ಟಿದ್ದ ಕೈ ಕಾಲನ್ನು ಸಡುಲಿಸಿದ ಅನುಭವ (ಪೂರ್ತಿ ಬಿಚ್ದಂಗಲ್ಲ ಯಾಕಂದ್ರೆ ಇನ್ನು ೨ ವರ್ಷ ಬಾಕಿ ಇದೆಯಲ). ಹಕ್ಕಿಯೊಂದನ್ನು ಸ್ವಚ್ಛಂದವಾದ ಹಾರಾಟಕ್ಕಾಗಿ ಬಿಟ್ಟ ಹಾಗಾಗಿದೆ. ಈ ಸಮಯದಲ್ಲಿ ಎಲ್ಲವೂ ಹೊಸತಾಗಿ ಹಾಗೂ ಸುಂದರವಾಗಿ ಕಾಣಲಿಕ್ಕೆ ಶುರುವಾಗಿ ಬಿಡುತ್ತದೆ.
ಚಿಕ್ಕಂದಿನಿಂದಲೂ ನಾವು ಪರೀಕ್ಷೆಯ ಜೊತೇನೆ ಬೆಳೆತೀವಿ ನಿಜ. ಆದ್ರೆ ಪರೀಕ್ಷೆ ಅಂದಾಕ್ಷಣ ನಮಗೆ ಅನ್ಸೋ ರೀತಿ ಬದಲಾಗ್ತಾ ಬಂದಿದೆ. ಚಿಕ್ಕವರಿದ್ದಾಗ ಪರೀಕ್ಷೆ ಅಂದ್ರೆ ಏನೂ ಅನ್ಸ್ತಾನೆ ಇರ್ಲಿಲ್ಲ. ಆಟ ,ಓಟ ,ಹಬ್ಬ ,ಸಂಭ್ರಮ ಏನನ್ನೂ ತ್ಯಾಗ ಮಾಡೋ ಅವಶ್ಯ ಇರ್ಲಿಲ್ಲ. ಏನೋ ಅಮ್ಮ ಪಾಠದ  ಹಿಂದಿನ ಪ್ರಶ್ನೆ ಅಲ್ಲದೆ ಮಧ್ಯದ್ದೂ ಕೇಳಲಿಕ್ಕೆ ಶುರು ಮಾಡಿದಾಗ ಒಂಚೂರು ಅನ್ಸ್ತಿತ್ತು  ಅಷ್ಟೇ. ಬಿಟ್ರೆ ಪರೀಕ್ಷೆ ಅನ್ನೋದು ಸದ್ದಿಲ್ಲದೇ ಬಂದು ಹೋಗ್ಬಿಡ್ತಿತ್ತು. ನವೋದಯ entranceಪರೀಕ್ಷೆ ಬರ್ದಾಗ್ಲೆ ಪರೀಕ್ಷೆ ಅನ್ನೋ ಪದದಲ್ಲಿ ಭಯ, ಕುತೂಹಲ ಕೂಡ ಅಡಗಿದೆ ಅಂತ ತಿಳ್ದಿದ್ದು. ಇನ್ನು ನಂತರದ ವಿಷಯ ಅಂತೂ ಹೇಳಂಗೆ ಇಲ್ಲ ಬಿಡಿ. ಎಲ್ಲೋ ಅಡಗಿ ಕೂತಿದ್ದ ಭಯದ ಅಂಶ ಎದ್ದು ವಿಶಾಲವಾಗಿ ಆವರಿಸಿಕೊಂ ಹಾಗಾಗಿದೆ. ಮೂರು ತಿಂಗಳ ಮುಂಚೆ ಇಂದಾನೆ ಶುರು ಆಗತ್ತೆ ಜ್ವರ. ಶುರು ಅಲ್ಲಿ ವೇಳಾಪಟ್ಟಿ ಹಾಕಿದ್ದೇ  ಹಾಕಿದ್ದು,  ಓದಿದ್ದೇ ಓದಿದ್ದು .ಬರ್ತಾ ಬರ್ತಾ ದೇವ್ರೇ ಮುಗ್ದ್ರೆ ಸಾಕು ಅನ್ನೋ ಭಾವನೆ. ಹಾಗೇ ನಾವು ಹುಡುಗಿಯರಿಗೆ ಹೆಮ್ಮೆಯ ವಿಷಯವಾದ ಅವರಿವರ ಬಗೆಗಿನ ಹರಟೆಗೆ ಕೊಡೊ ಸಮಯವೂ ಸಹ ಕಮ್ಮಿ ಆಗ್ತಾ ಬರ್ತದೆ. ಈ ನಮ್ಮ ೩ ತಿಂಗಳ ಮೌನವನ್ನು ಸಂಭ್ರಮಿಸುವ ಏಕೈಕ ವ್ಯಕ್ತಿ ಅಂದ್ರೆ ನಮ್ಮ ಸೆಕ್ಯೂರಿಟಿ ನೋಡಿ. ಯಾಕಂದ್ರೆ ಸುಮ್ನಿರ್ಸೋ ಕೆಲಸ ತಪ್ಪುತ್ತಲ್ವ ಅದಕ್ಕೆ. ಹೀಗೆ ಹೇಗೋ ಮಾಡಿ theory ಮುಗಿಸ್ತೀವಿ. ಇನ್ನು practical ನ ಸಮಯ. ಇದು ಒಂಥರಾ ಮಜಾ ಕಣ್ರೀ. ಹೆಂಗಂದ್ರೆ propose ಮಾಡದೆ ಇರೋ ಆದ್ರೆ ಇಬ್ಬರಿಗೂ ಸಮ್ಮತಿ ಇರೋ ಪ್ರೀತಿಯ  ಥರ. ನಮಗೂ ಗೊತ್ತಿರತ್ತೆ  ಅವರಿಗೂ ಗೊತ್ತಿರತ್ತೆ  pass ಆಗ್ತೀವಂತ. ಆದರೂ ಸಹ ಭರವಸೆ ತುಂಬಿದ  ಭಯದ ನಾಟಕ . ಇನ್ನು viva ಗಂತೂ ವಿಷಯದ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲ ಅಂದ್ರೂ ಪರೀಕ್ಷಕರು ಹೇಗಿದಾರೆ ಅನ್ನೋದರ ಬಗ್ಗೆ  ಅಂತೂ ಪಕ್ಕಾ ಆಗಿ ಹೋಗಿರ್ತಿವಿ.
 ಅಬ್ಬಾ ಹಾಗೋ ಹೇಗೋ ಪರೀಕ್ಷೆ ಮುಗ್ಸಿದ್ದಾಯ್ತು.. ಏನು ಹೇಗಾಯ್ತು ಅಂತ ಕೇಳಿದ್ರಾ.. ಮುಗೀತು ಅಷ್ಟೇ ಆ ಥರದ ಪ್ರಶ್ನೆಗಳೆಲ್ಲ ಇಲ್ಲಿ ನಿಷೇಧ. ಕೊಟ್ಟಿಲ್ಲದ, ತೆಗೆದುಕೊಳ್ಳದ treatಗಳು , hello ಅನ್ನದ hi ಗಳು, ತಿಂಗಳುಗಟ್ಟಲೆ ಹೋಗ್ಲಿಕ್ಕಾಗದ ಮನೆಗಳು ಹೀಗೆ ಇನ್ನೂ ತುಂಬಾ ಬಾಕಿ ಇವೆ. ಹಾಗೆ ಸಿರಿಮನೆಗೂ ಬಂದು ತುಂಬಾ ದಿನ ಆಗಿತ್ತು. ಅದ್ಕೆ ಮೊದಲು ಇಲ್ಲಿ ಬಂದು ಮನೆ ಚೂರು ಧೂಳು ಆಗಿತ್ತು ಸ್ವಚ್ಛ ಮಾಡಿ ನಿಮಗೆಲ್ಲ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿಯ ಶುಭಾಷಯ ಹೇಳಿ ಮುಂದೆ ಹೋಗುವ ಅಂತ ಬಂದೆ. 


ಮಕರ ಸಂಕ್ರಾಂತಿಯ ಹಾರ್ದಿಕ ಶುಭಕಾಮನೆಗಳು
ಸರಿ ಬರ್ತೀನಿ:)

Sunday, August 14, 2011

ಪದಸಿರಿ-೨

ಅವ ಕೇಳಿದ "ಮನ ದಕ್ಕದಾ?"
ಬಡಿದೆನ್ನ ಮನದ ಕದ.
ಅವನೇ ನಾಯಕ ಎನ್ನ 'ಮನದಂಕದ'
ಅದೇ.. ಅವ.. ಸಿರಿಮನದಕಂದ!!