Sunday, August 12, 2012
Thursday, July 5, 2012
ಅಪ್ಪನ ತೆನಾಲಿ ರಾಮನ ಕತೆಗಳ ನೆನಪಿಸೋ ನಿದ್ದೆ ಬರದ ರಾತ್ರಿ!!
ಬಿಸಿ ಅನ್ನ ಸಾರು!!
ಮನಸ್ವೇಚ್ಚೆ ಆಡಿ ಬಿಳಿ ಅಂಗಿ ಕೊಳೆ ಮಾಡಿಕೊಂಡು ಮನೆಗೆ ಬರುತ್ತಿದುದನ್ನು
ನೆನಪಿಸೋ ಶನಿವಾರದ ಮಧ್ಯಾಹ್ನ!!
ಆಟ,ಊಟ,ಪಾಠ ಎಲ್ಲಕ್ಕೂ ಸಾಥ್ ನೀಡುತಿದ್ದ ಕುಚಿಕೂ ಸ್ನೇಹವ
ನೆನಪಿಸೋ ಈಗಿನ ಏಕಾಂತ!!
ಅಮೃತದಂತಹ ಅಜ್ಜಿ ಅಡುಗೆಯ ನೆನಪಿಸೋ ಹೆಂಚಿನಡಿಯ ಬಾಳೆ ಎಲೆ ಊಟ!!
ನೆನಪುಗಳು ನೆನಪಾಗಿ ಮುಸುನಗಲು ತುಸು ನೆಪ ಸಾಕಲ್ಲವೇ
ಈ ಹುಸಿಮರೆವಿನ ಮನಸಿಗೆ?!!
-ಸಿರಿ
Monday, March 26, 2012
ಭ್ರಾತೃಶ್ರೀ ಭರತ್ ಗೆ birthday ಯ badaayi..
ನಂತರ ನೀನು ಮಾತಾಡೋದು ಕಲಿತೆ. ಮಾತು ಬಂದಿದ್ದೇ ತಡ ದೇವರಲ್ಲಿ ನಿನ್ನ ಪ್ರಥಮ ಕೋರಿಕೆ - ದೇವ್ರೇ ಬೇಗ ಮೀಸೆ ಬರೋ ಹಾಗೆ ಮಾಡಪ್ಪ ಅಂತ. ಗುಡಿಗೆ ಹೋದ್ರೆ ನಮಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗು. ನಂತರ ನಿನ್ನ ಶಾಲೆಗೆ ಸೇರಿಸಬೇಕದ್ರಂತೂ ನಾನು ಶತಪ್ರಯತ್ನ ಮಾಡಬೇಕಾಯ್ತು. ಅದೆಷ್ಟು ಹಠ ಪುಟ ನಿಂದು. ಆದರೆ ಅಲ್ಲಿಂದ ನೀ ಹಿಡಿದ ಹಾದಿಗಳೆಲ್ಲವೂ ಯಶಸ್ಸಿನವೇ.
ಹೀಗೆಯೇ ನಿನ್ನ ಜೀವನದಲ್ಲಿ ಪ್ರತಿ ಘಳಿಗೆ, ಪ್ರತಿ ಕ್ಷಣವೂ ಯಶಸ್ಸು ದೊರೆಯುತಿರಲಿ. ಜೀವನವೆಂಬ ದೋಣಿಯ ಚುಕ್ಕಾಣಿ ಯಾವ ತರಹದ ನೇವುರಕ್ಕೂ ಸಿಗದಂತೆ ಅದನ್ನು ಅತೀ ಜಾಗರೂಕತೆಯಿಂದ ನಡೆಸುವಂತಾಗಲಿ.ಧಮನಿ-ಧಮನಿಗಳ ಮಿಡಿತಗಳಲ್ಲಿ ಕೇಳಿ ಬರಲಿ ಪರಿಶ್ರಮ,ಹೋರಾಟ,ವಿವೇಕ,ಸಭ್ಯತೆ,ಸಜ್ಜನಿಕೆಯ ಸಾಮಗಾನ. ನೀನು ಮಾಡಿದ ಉಪಕಾರ, ಆಡಿದ ಒಳ್ಳೆಯ ಮಾತೇ ನಿನ್ನ ಭವಿಷ್ಯಕ್ಕೆ ಇಂಬು.ಈ ನಿನ್ನ ೧೭ನೆಯ ಸಂವತ್ಸರದ ಹುಟ್ಟು ಹಬ್ಬ ಉಜ್ವಲ ಹಾಗೂ ಶಾಂತಿ ತುಂಬಿದ ಖುಷಿ ಜೀವನಕ್ಕೆ ನಾಂದಿಯಾಗಲೆಂದು ಆಶಿಸುತ್ತಾ
-ನಿನ್ನ ಅಕ್ಕ
ಮತ್ತೊಮ್ಮೆ ಹುಟ್ಟು ಹಬ್ಬದ ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
ಶುಭವಾಗಲಿ:)
ಮತ್ತೊಮ್ಮೆ ಹುಟ್ಟು ಹಬ್ಬದ ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
ಶುಭವಾಗಲಿ:)
Tuesday, January 31, 2012
SHEರಸಿಯಲ್ಲಿ SHEಯ ಮನೆ
ಅಂದು ಆದಿತ್ಯವಾರ. ಅಮ್ಮ ಕೇಳಿದ್ರು ತಿಂಡಿ ಏನ್ ಬೇಕಂತ. ಮನೇಲಿ ಏನೇನ್ ತಿನ್ಬೇಕು ಅಂದುಕೊಂಡಿದ್ನೋ ಎಲ್ಲ ತಿಂದಾಗಿತ್ತು. ಆಗ ನೆನಪಾಗಿದ್ದು ತೆಳವು ಬೆಲ್ಲ. ಹಾಗಂದಾಗ ನೆನಪಗೋದೆ ಶಿರಸಿ. ಹೀಗೆ ನಮ್ಮ ಪಯಣ ಶುರು ಆಯಿತು. ಹೋಗೋ ಮುಂಚೆ ಹೇಳೋಣ ಅಂತ ಗೆಳತಿ ಉಷಾಳ ಮೊಬೈಲ ಗೆ ಕರೆ ಮಾಡಿದ್ರೆ ತಾಗಲಿಲ್ಲ. ಈ ಮೊಬೈಲ್ ಗಳೇ ಹೀಗೆ ನೋಡಿ boyfriend ತರಹ. ಯಾವಾಗ ವ್ಯಾಪ್ತಿ ಪ್ರದೇಶದಿಂದ ಹೊರಗೋಗ್ತಾರೆ ಹೇಳಲಿಕ್ಕಾಗಲ್ಲ. ಅದೇ landline ಹಾಗಲ್ಲ. ಅದು ಪತಿ ತರ. 'ಏನೋ ಕೆಲವೊಮ್ಮೆ ಬೇರೆಯವರೊಡನೆ ವ್ಯಸ್ತರಾಗಿದ್ದಾರೆ' ಅಂತ ಬರಬಹುದು ಆದ್ರೆ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗೋದು ಅತೀ ವಿರಳ. ಆದ್ದರಿಂದ landline ಗೆ ಕರೆ ಮಾಡಿ ತಿಳಿಸಿ ಮನೆ ವಿಳಾಸ ಕೇಳಿದ್ದು ಆಯಿತು. ಇಷ್ಟರಲ್ಲಿ ಶಿರಸಿ ಬಂತು. ಕುಳಿಮನೆ ದಾರಿ ಹಿಡಿದೆವು. ಅಲ್ಲಿ ಜನರು ಕುಳಿಮನೆಗೆ ಸೀದಾ ಹೋಗ್ಬೇಕು ಅಂತ ಹೇಳಿದ್ರು. ಹಾಗೆ ನಾವು ಹೊರಟೆವು. ಮೊದ ಮೊದಲು ಒಂದೆರಡು ಹಳ್ಳಿ ಸಿಕ್ಕಂಗಾಯ್ತು. ಆಮೇಲಂತೂ ಎಲ್ಲೆಡೆ ಕಾಡು ಕಾಡೇ. ಅರ್ಧ ತಾಸಾದ್ರು ಒಂದು ಮನೆಯಾಗಲೀ ಮನುಷ್ಯರಾಗಲೀ ಏನೂ ಕಣ್ಣಿಗೆ ಬೀಳಲಿಲ್ಲ. ನಮಗೆ ಗಡ ಗಡ ಶುರು ಆಯಿತು. ಮುಂದೆ ದಾರೀ ಆದರೂ ಇದೆಯೋ ಇಲ್ವೋ ಅಂತ ಸಹ ಗೊತ್ತಾಗ್ತಿಲ್ಲ. ಸಾಲದಂತೆ ಕಾರ್ ಅಲ್ಲಿ ಪೆಟ್ರೋಲ್ ಬೇರೆ ಖಾಲಿ ಆಗ್ತಾ ಬಂದಿತ್ತು. ಅಂದ್ರೂ ದೇವರ ಮೇಲೆ ಭಾರ ಹಾಕಿ ಹೊರಟೆವು. ಇದರ ಜೊತೆ ಮಳೆ ಬೇರೆ. ಕಾರ್ ಅಲ್ಲಿ ಸಣ್ಣಗೆ ಹಾಡು ಕೇಳಿ ಬರ್ತಿತ್ತು. 'ಉಡಿಸಲೇ ಬೆಳಕಿನ ಸೀರೆಯ ' ಹಾಡು ಮುಗಿದು female version ಶುರು ಆಯಿತು. ಅದಕ್ಕೆ ನಮ್ಮ ಭ್ರಾತೃಶ್ರೀ ಅವ್ರು ಹೇಳಿದ್ದು "ಇಲ್ಲಿ ತನಕ ಅವ ಸೀರಿ ಉಡಿಸಿದ ಇನ್ಮ್ಯಾಲ ಇಕಿ ಅಂಗಿ ಹಾಕ್ತಾಳನ". ಭಯ ಆವರಿಸಿದ್ದ ಆ ಸಮಯದಲ್ಲಿ ನಗು ಕೂಡ ಭಯದಿಂದ ಹಾಡು ಹೋದಂಗಿತ್ತು. ಹೀಗೆ ಹೋಗ್ತಾ ಕೊನೆಗೂ ದೇವರ ಹಾಗೆ ಒಬ್ರು ಅಜ್ಜ ಕಂಡರು. ಅವ್ರು ಸಹ ಹೀಗೆ ಸೀದಾ ಹೋಗ್ಬೇಕು ಅಂದಾಗ ಹೋದ ಜೀವ ಬಂದಂಗಾಯ್ತು. ಅಂತು ಒಂದು ಮನೆ ಕಾಣಿಸಿ ಬಿಡ್ತು. ಜೋರಾಗಿ horn ಹಾಕ್ತಾ ಮನೆ ಕಡೆ ತಿರ್ಗಿದ್ವಿ. ಅದು ಆ ಸಂದರ್ಭಕ್ಕೆ ವಿಜಯದ ಕಹಳಯಂತಿತ್ತು. ನಂತರ ಮನೆ ಕಡೆ ನಡೆದೆವು. ಕ್ಷೇಮ ವಿಚಾರಿಸಿದ್ದಾಯ್ತು. 'ಆಸರೆಗೆ ಎಂತ ತಗೋತೀರಿ" ಅಂತ ಕೇಳಿದ್ದಾಯ್ತು. ಎಷ್ಟೊತ್ತಾದರೂ ಉಷಾ ಹೊರಗೆ ಬರಲಿಲ್ಲ. "ಅಂಕಲ್, ಉಷಾ ಎಲ್ಲಿ?" ಅಂತ ಕೇಳಿದಾಗ ಅವರು "ಉಷಾನ, ಆ ತರ ಇಲ್ಲಿ ಯಾರು ಇಲ್ಲ" ಅಂದಾಗ ನಾನು "neevu ಈಶ್ವರ ಹೆಗಡೆ ಅಲ್ವ? " ಅಂದಾಗ "ಹೌದು, ಆದರೆ ಈಶ್ವರ ಹೆಗಡೆ ಅಂತ ಇಲ್ಲಿ ಇನ್ನೊಬ್ಬರಿದ್ದಾರೆ, ಅವರ ಮಗಳು ಉಷಾ" ಅಂದ್ರು. ಆಗ ನಮಗೆ ತಿಳೀತು ಇದು ಅವಳ ಮನೆ ಅಲ್ಲ ಅಂತ. ಇಷ್ಟು ಗೊತ್ತಾದ ಮೇಲೂ ಕೂಡ ಅವರು ಹೇಗೂ ಬಂದಿದೀರಿ ಇವತ್ತೊಂದಿನ ಇದ್ದು ಹೋಗಬಹುದಲ್ಲ" ಅಂದರು. ಮತ್ತೆ ಬರ್ತೀವಿ ಅಂತ ಹೇಳಿ ನಾವು ಅವಳ ಮನೆಯ ವಿಳಾಸ ಕೇಳಿಕೊಂಡು ನಡೆದೆವು. ಕೊನೆಗೂ ಆಕೆಯ ಮನೆ ಸಿಕ್ಕಿ, ಅಲ್ಲಿ ಆಗಿದ್ದೆಲ್ಲ ಹೇಳಿ ತೆಳವು ಬೆಲ್ಲ ತಿಂದೆವು. ಹಾಗೆ ಬೆಟ್ಟಕ್ಕೆ ಹೋಗಿ ಬರುವಷ್ಟರಲ್ಲಿ ಅಪ್ಪ ಅಮ್ಮ ಅಡಿಗೆಮನೆಗಂತೂ ಬರೋದೇ ಇಲ್ಲ, ನಿದ್ದೆ ತುಂಬಾ.. ಹೀಗೆ ಅನಂತಾನಂತ ಅಸಮಾಧಾನಗಳನ್ನು ಪರಸ್ಪರ ಹಂಚಿಕೊಂಡಾಗಿತ್ತು. ಇಷ್ಟರಲ್ಲಿ ಸಂಜೆ ಆಯಿತು. ಹೀಗೆ ಅಲ್ಲಿಂದ ಬರಬೇಕಾದರೆ ಮಿಡಿಗಾಯಿ. ಜೋನಿಬೆಲ್ಲ ಹೀಗೆ ತುಂಬಾ ಏನೇನೋ ತಗೊಂಡು ಬಂದ್ವಿ. ಇವೆಲ್ಲ ದಿನ ಕಳೆದಂತೆ ಖಾಲಿ ಆದವು. ಆದರೆ 'ಅತಿಥಿ ದೇವೋಭವ' ಎಂಬ ಉಕ್ತಿಯ ಅರ್ಥವನ್ನು ಶಬ್ದಶಃ ತಿಳಿಸಿಕೊಟ್ಟ ಅ ವ್ಯಕ್ತಿಯ ಸದ್ಗುಣದ ನೆನಪು ಮಾತ್ರ ಮನದಲಿ ಮಾಸದೆ ಅಚ್ಚಾಗಿ ಉಳಿದಿದೆ. ಯಾರಾದರು ಬಾಗಿಲು ತಟ್ಟಿದಾಗ pinhole ಅಲ್ಲಿ ನೋಡಿ ನಂತರ ಬಾಗಿಲು ತೆಗೆಯೋ ಈ ಕಾಲದಲ್ಲಿ ಯಾರು ಎಂದು ಗೊತ್ತಿಲ್ಲದಿದ್ದರೂ ಒಂದು ದಿನ ಉಳಿದು ಹೋಗಬಹುದಿತ್ತು ಎಂದಾಗ ನನ್ನ ಮನಸ್ಸು ಅರಿವಿಲ್ಲದೆ ಸಲಾಂ ಹಾಕಿತ್ತು ಅವರ ದೊಡ್ದತನಕ್ಕೆ. ಆಗಿನಿಂದ ಶಿರಸಿ ಅಂದಾಗ ತೆಳವು,ಬೆಲ್ಲಕ್ಕೂ ಮುಂಚೆ ನೆನಪಾಗೋದು ಅದಕ್ಕಿಂತಲೂ ಸಿಹಿಯಾದ ವಿಶಾಲ ಹೃದಯತೆ, ಮುಗ್ದತೆ ಹಾಗೂ ಸದ್ಗುಣ.
Monday, January 23, 2012
ಪರೀಕ್ಷೆ
ಈ ಲೇಖನ ಪರೀಕ್ಷೆಗೆ ಬಿಟ್ಟ ಗಡ್ಡ, eye-brow ಗೆ, "movie ಗಾ.. ಆಗಲ್ಲ ಮಚಾ ನಾಳೆ exam","ಇಲ್ಲ ಅತ್ತೆ ಈ ಸಂಕ್ರಾಂತಿಗೆ ಬರಕಾಗಲ್ಲ", "ಹೇ exam ಮುಗ್ದಿದ್ದಿನ ಎಲ್ಲಿಗೆ ಹೋಗಣರೆ" ಹಾಗೂ ಉತ್ತರಿಸದಿರದ "ಹಾಯ್, ಸಾಕ್ ಮಾರೈತಿ ಓದಿದ್ದು.. ಅರ್ಧ ತಾಸೂ ನಂಜೊತೆ ಚಾಟ್ ಮಾಡಕಾಗಲ್ವ!" ಅನ್ನೋ ಅನಂತಾನಂತ ಸಂದೇಶಗಳಿಗೆ..
ಅಬ್ಬ ಅಂತೂ ಇಂತೂ ಪರೀಕ್ಷೆ ಮುಗೀತು.. ಗಟ್ಟಿಯಾಗಿ ಕಟ್ಟಿದ್ದ ಕೈ ಕಾಲನ್ನು ಸಡುಲಿಸಿದ ಅನುಭವ (ಪೂರ್ತಿ ಬಿಚ್ದಂಗಲ್ಲ ಯಾಕಂದ್ರೆ ಇನ್ನು ೨ ವರ್ಷ ಬಾಕಿ ಇದೆಯಲ). ಹಕ್ಕಿಯೊಂದನ್ನು ಸ್ವಚ್ಛಂದವಾದ ಹಾರಾಟಕ್ಕಾಗಿ ಬಿಟ್ಟ ಹಾಗಾಗಿದೆ. ಈ ಸಮಯದಲ್ಲಿ ಎಲ್ಲವೂ ಹೊಸತಾಗಿ ಹಾಗೂ ಸುಂದರವಾಗಿ ಕಾಣಲಿಕ್ಕೆ ಶುರುವಾಗಿ ಬಿಡುತ್ತದೆ.
ಚಿಕ್ಕಂದಿನಿಂದಲೂ ನಾವು ಪರೀಕ್ಷೆಯ ಜೊತೇನೆ ಬೆಳೆತೀವಿ ನಿಜ. ಆದ್ರೆ ಪರೀಕ್ಷೆ ಅಂದಾಕ್ಷಣ ನಮಗೆ ಅನ್ಸೋ ರೀತಿ ಬದಲಾಗ್ತಾ ಬಂದಿದೆ. ಚಿಕ್ಕವರಿದ್ದಾಗ ಪರೀಕ್ಷೆ ಅಂದ್ರೆ ಏನೂ ಅನ್ಸ್ತಾನೆ ಇರ್ಲಿಲ್ಲ. ಆಟ ,ಓಟ ,ಹಬ್ಬ ,ಸಂಭ್ರಮ ಏನನ್ನೂ ತ್ಯಾಗ ಮಾಡೋ ಅವಶ್ಯ ಇರ್ಲಿಲ್ಲ. ಏನೋ ಅಮ್ಮ ಪಾಠದ ಹಿಂದಿನ ಪ್ರಶ್ನೆ ಅಲ್ಲದೆ ಮಧ್ಯದ್ದೂ ಕೇಳಲಿಕ್ಕೆ ಶುರು ಮಾಡಿದಾಗ ಒಂಚೂರು ಅನ್ಸ್ತಿತ್ತು ಅಷ್ಟೇ. ಬಿಟ್ರೆ ಪರೀಕ್ಷೆ ಅನ್ನೋದು ಸದ್ದಿಲ್ಲದೇ ಬಂದು ಹೋಗ್ಬಿಡ್ತಿತ್ತು. ನವೋದಯ entranceಪರೀಕ್ಷೆ ಬರ್ದಾಗ್ಲೆ ಪರೀಕ್ಷೆ ಅನ್ನೋ ಪದದಲ್ಲಿ ಭಯ, ಕುತೂಹಲ ಕೂಡ ಅಡಗಿದೆ ಅಂತ ತಿಳ್ದಿದ್ದು. ಇನ್ನು ನಂತರದ ವಿಷಯ ಅಂತೂ ಹೇಳಂಗೆ ಇಲ್ಲ ಬಿಡಿ. ಎಲ್ಲೋ ಅಡಗಿ ಕೂತಿದ್ದ ಭಯದ ಅಂಶ ಎದ್ದು ವಿಶಾಲವಾಗಿ ಆವರಿಸಿಕೊಂಡ ಹಾಗಾಗಿದೆ. ಮೂರು ತಿಂಗಳ ಮುಂಚೆ ಇಂದಾನೆ ಶುರು ಆಗತ್ತೆ ಜ್ವರ. ಶುರು ಅಲ್ಲಿ ವೇಳಾಪಟ್ಟಿ ಹಾಕಿದ್ದೇ ಹಾಕಿದ್ದು, ಓದಿದ್ದೇ ಓದಿದ್ದು .ಬರ್ತಾ ಬರ್ತಾ ದೇವ್ರೇ ಮುಗ್ದ್ರೆ ಸಾಕು ಅನ್ನೋ ಭಾವನೆ. ಹಾಗೇ ನಾವು ಹುಡುಗಿಯರಿಗೆ ಹೆಮ್ಮೆಯ ವಿಷಯವಾದ ಅವರಿವರ ಬಗೆಗಿನ ಹರಟೆಗೆ ಕೊಡೊ ಸಮಯವೂ ಸಹ ಕಮ್ಮಿ ಆಗ್ತಾ ಬರ್ತದೆ. ಈ ನಮ್ಮ ೩ ತಿಂಗಳ ಮೌನವನ್ನು ಸಂಭ್ರಮಿಸುವ ಏಕೈಕ ವ್ಯಕ್ತಿ ಅಂದ್ರೆ ನಮ್ಮ ಸೆಕ್ಯೂರಿಟಿ ನೋಡಿ. ಯಾಕಂದ್ರೆ ಸುಮ್ನಿರ್ಸೋ ಕೆಲಸ ತಪ್ಪುತ್ತಲ್ವ ಅದಕ್ಕೆ. ಹೀಗೆ ಹೇಗೋ ಮಾಡಿ theory ಮುಗಿಸ್ತೀವಿ. ಇನ್ನು practical ನ ಸಮಯ. ಇದು ಒಂಥರಾ ಮಜಾ ಕಣ್ರೀ. ಹೆಂಗಂದ್ರೆ propose ಮಾಡದೆ ಇರೋ ಆದ್ರೆ ಇಬ್ಬರಿಗೂ ಸಮ್ಮತಿ ಇರೋ ಪ್ರೀತಿಯ ಥರ. ನಮಗೂ ಗೊತ್ತಿರತ್ತೆ ಅವರಿಗೂ ಗೊತ್ತಿರತ್ತೆ pass ಆಗ್ತೀವಂತ. ಆದರೂ ಸಹ ಭರವಸೆ ತುಂಬಿದ ಭಯದ ನಾಟಕ . ಇನ್ನು viva ಗಂತೂ ವಿಷಯದ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲ ಅಂದ್ರೂ ಪರೀಕ್ಷಕರು ಹೇಗಿದಾರೆ ಅನ್ನೋದರ ಬಗ್ಗೆ ಅಂತೂ ಪಕ್ಕಾ ಆಗಿ ಹೋಗಿರ್ತಿವಿ.ಮಕರ ಸಂಕ್ರಾಂತಿಯ ಹಾರ್ದಿಕ ಶುಭಕಾಮನೆಗಳು
ಸರಿ ಬರ್ತೀನಿ:)
Subscribe to:
Posts (Atom)